Advertisement

ಉಡುಪಿ | ಸಾಧಿಸಲು ಆಸಕ್ತಿ ಮತ್ತು ಸಮರ್ಪಣಾಭಾವ ಅಗತ್ಯ : ಕಲಾವಿದೆ ರೆಮೋನಾ ಇವೆಟ್ ಪಿರೇರಾ

ನಮ್ಮಲ್ಲಿ ಆಸಕ್ತಿ ಮತ್ತು ಸಮರ್ಪಣಾಭಾವ ಇದ್ದಾಗ ಯಾವುದೇ ಅಡೆತಡೆಗಳನ್ನು ಎದುರಿಸಿ ಸಾಧನೆಯ ಶಿಖರವನ್ನು ಏರಲು ಸಾಧ್ಯವಿದೆ ಎಂದು 170 ತಾಸು ಭರತನಾಟ್ಯ ಪ್ರದರ್ಶನ ನೀಡಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿದ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಹೇಳಿದರು.

ಅವರು ಭಾನುವಾರ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಮಹಿಳಾ ಆಯೋಗ ಹಾಗೂ ಸ್ತ್ರೀ ಸಂಘಟನೆ ಆಯೋಜಿಸಿದ್ದ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಕೂಡ ವಿಶೇಷವಾದ ಪ್ರತಿಭೆಗಳಿದ್ದು ಅದಕ್ಕೆ ಹೆತ್ತವರ ಹಾಗೂ ಸಮಾಜದ ಪ್ರೋತ್ಸಾಹ ಲಭಿಸಿದಾಗ ಸಾಧನೆ ಮಾಡಲು ಉತ್ಸಾಹ ಬರುತ್ತದೆ. ಹೆಣ್ಣು ಮಕ್ಕಳಿಗೆ ಕಠಿಣವಾದ ಸಾಧನೆಗಳನ್ನು ಮಾಡುವಾಗ ಸಮಾಜದಿಂದ ಪ್ರೋತ್ಸಾಹದ ಜೊತೆಗೆ ಟೀಕೆಗಳು ಲಭಿಸುವುದು ಕೂಡ ಸಹಜ ಆದರೆ ಅದರ ಬಗ್ಗೆ ಹೆಚ್ಚಿನ ತಲೆಕೆಡಿಸದೆ ಸಾಧನೆ ಮಾಡಬೇಕು ಎನ್ನುವ ಒಂದೇ ಗುರಿಯೊಂದಿಗೆ ಮುನ್ನುಗ್ಗಿದಾಗ ಯಶಸ್ಸು ಶತಸಿದ್ದ. ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಹೆತ್ತವರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರದೆ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಿದಾಗ ಮುಂದೊಂದು ದಿನ ಉತ್ತಮವಾದ ಸಾಧನೆ ತೋರಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಮಾತನಾಡಿ ಹೆಣ್ಣು ಅಬಲೆಯಲ್ಲ ಬದಲು ಸಬಲೆ ಎನ್ನುವುದು ಈಗಾಗಲೇ ತಮ್ಮ ಸಾಧನೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಟಿ ಬಚಾವೊ ಬೇಟಿ ಪಡಾವೊ ಮೂಲಕ ದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಪ್ರೋತ್ಸಾಹ ಲಭಿಸುತ್ತಿದ್ದು ಅದರ ಪ್ರಯೋಜನವನ್ನು ಪಡೆಯಬೇಕು. ಹಿಂದಿನ ಪರಿಸ್ಥಿತಿಗಳಿಗೆ ಹೋಲಿಸಿದರೆ ಹೆಣ್ಣು ಇಂದು ಎಲ್ಲ ರಂಗದಲ್ಲೂ ಮುಂದಿದ್ದಾಳೆ. ಈ ದೇಶದಲ್ಲಿ ಹೆಣ್ಣಿಗೆ ಅವಕಾಶಗಳು ಸಾಕಷ್ಟಿವೆ ಅವುಗಳನ್ನು ಬಳಸಿಕೊಳ್ಳುವ ಮೂಲಕ ಎತ್ತರಕ್ಕೆ ಬೆಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಜಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಚರ್ಚಿನ ವತಿಯಿಂದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿದ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಅವರಿಗೆ ಸನ್ಮಾನಿಸಲಾಯಿತು.

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ವಿವಿಧ ಸಂಕೋಲೆಗಳಿಂದ ಬಂಧಿಯಾಗಿಸಿದ್ದು ಅದರಿಂದ ಮುಕ್ತಗೊಳಿಸುವ ಮೂಲಕ ರೆಮೋನಾ ಇವೆಟ್ ಪಿರೇರಾ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಚರ್ಚಿನ ಹೆಣ್ಣು ಮಕ್ಕಳು ಸಮಾಜದಲ್ಲಿ ಮಹಿಳೆಯ ಸ್ಥಾನಮಾನವನ್ನು ಪರಿಚಯಿಸುವ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೃತ್ಯ, ಕಿರು ನಾಟಕಗಳ ಮೂಲಕ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಚರ್ಚಿನ ಪಾಲನಾ ಮಂಡಳಿಯ ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಚಾಲಕಿ ವನಿತಾ ಫೆರ್ನಾಂಡಿಸ್, ರೆಮೋನಾ ಪಿರೇರಾ ತಾಯಿ ಗ್ಲ್ಯಾಡಿಸ್ ಪಿರೇರಾ, ಹೆಣ್ಣು ಮಕ್ಕಳ ಪ್ರತಿನಿಧಿಗಳಾಗಿ ಶರ್ಲಿನ್ ಫೆರ್ನಾಂಡಿಸ್, ಅನೋರಾ ಫೆರ್ನಾಂಡಿಸ್, ಚರ್ಚಿನ ಆಗ್ನೆಲ್ ಡಿಸೋಜಾ ಉಪಸ್ಥಿತರಿದ್ದರು. ಸ್ತ್ರೀ ಸಂಘಟನೆಯ ಪ್ರಿಯಾ ರೊಡ್ರಿಗಸ್ ಸ್ವಾಗತಿಸಿ, ಶಾಂತಿ ಫೆರ್ನಾಂಡಿಸ್ ವಂದಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions