ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯ ಸಂಪ್ರೆ ಎಂಬಲ್ಲಿ ಸೌಪರ್ಣಿಕಾ ನದಿಯಲ್ಲಿ ಯುವಕನೋರ್ವ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ತನ್ನ ಬಗ್ಗೆ ಮಾಡುತ್ತಿರುವ ಅಪಪ್ರಚಾರದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಇಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಕೊಲ್ಲೂರಿನ ನಟೇಶ್ (36) ಆತ್ಮಹತ್ಯೆ ಮಾಡಿಕೊಂಡವರು. ಇವರು ಆ.7ರಂದು ಸಂಪ್ರೆಯ ಸೌಪರ್ಣಿಕಾ ನದಿಯಲ್ಲಿ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ವೇಳೆ ನಟೇಶ್ ಸೌಪರ್ಣಿಕಾ ನದಿಯ ದಡದಲ್ಲಿ ನಿಲ್ಲಿಸಿದ್ದ ಕಾರನ್ನು ಮನೆಗೆ ಕೊಂಡೊಯ್ಯಲಾಗಿತ್ತು.. ಆ.8 ರಂದು ಬೆಳಗ್ಗೆ ಮನೆಮಂದಿ ನಟೇಶ್ ರ ಕಾರಿನ ಒಳಗೆ ಪರಿಶೀಲಿಸಿದಾಗ ನಟೇಶ್ ಬಳಸುತ್ತಿದ್ದ ಮೊಬೈಲ್ ಮತ್ತು ಅದರ ಜೊತೆಗೆ ಒಂದು ಚೀಟಿ ಲಭಿಸಿದೆ. ಆ ಚೀಟಿಯಲ್ಲಿ ತನ್ನ ಸಾವಿನ ರಹಸ್ಯ ಮೊಬೈಲ್ ಗ್ಯಾಲರಿಯಲ್ಲಿದೆ ಎಂದು ಬರೆದು ಮೊಬೈಲ್ ಪಾಸ್ ವರ್ಡ್ ಅನ್ನು ಕೂಡಾ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್ ಅನ್ನು ಪರಿಶೀಲಿಸಿದಾಗ ಸಂತು ಮತ್ತು ನಾಗೇಶ ಯಾನೆ ದಳಿ ನಾಗ ಎಂಬವರು ತನ್ನ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದು, ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನಟೇಶ್ ಮಾಡಿರುವ ವೀಡಿಯೊ ಪತ್ತೆಯಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂತು ಯಾನೆ ಸಂತೋಷ್ ಮತ್ತು ದಳಿ-ನಾಗ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions