Advertisement

ಉಡುಪಿ; ನೇಜಾರಿನ ನೂರ್ ಉಲ್ ಫುರ್ಖಾನ್ ವಿಶೇಷ ಮಕ್ಕಳ ಶಾಲೆಯಲ್ಲಿ ವಾರ್ಷಿಕೋತ್ಸವ

ಉಡುಪಿಯ ನೇಜಾರಿನಲ್ಲಿರುವ ನೂರುಲ್ ಫುರ್ಖಾನ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ನೂರ್ ಉಲ್ ಫುರ್ಖಾನ್ ವಿಶೇಷ ಮಕ್ಕಳ ಶಾಲೆಯ 2025-26ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ “Abilities Beyond Disabilities” ಎಂಬ ಘೋಷವಾಕ್ಯದೊಂದಿಗೆ ನೇಜಾರಿನ ಶಕುಂತಲಾ ವಾದಿರಾಜ ರಾವ್ ಸಭಾ ಭವನದಲ್ಲಿ ನಡೆಯಿತು.

ಶಾಲೆಯ ಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ದಿಲ್‌ದಾರ್ ಫಝುಲುರೆಹ್ಮಾನ್ ಅವರು ಸ್ವಾಗತ ಭಾಷಣ ಹಾಗೂ ವಾರ್ಷಿಕ ವರದಿ ಮಂಡಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ವಿಶೇಷ ಅಗತ್ಯವಿರುವ ಮಕ್ಕಳ ಪ್ರತಿಭೆ, ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಸಮಾಜದ ಮುಂದಿಡುವ ಉದ್ದೇಶದಿಂದ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. “ವೈಕಲ್ಯಕ್ಕಿಂತ ಸಾಮರ್ಥ್ಯ ಮಹತ್ತರ” ಎಂಬ ಸಂದೇಶವನ್ನು ಸಾರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಕಲಾ ಪ್ರದರ್ಶನಗಳು ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ವಿಶೇಷ ಮಕ್ಕಳ ಬೆಳವಣಿಗೆ ಕೇವಲ ಪೋಷಕರ ಹೊಣೆಗಾರಿಕೆಯಾಗಿಲ್ಲ, ಸರ್ಕಾರದ ಜವಾಬ್ದಾರಿಯೂ ಆಗಿದೆ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಿ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶ್ರೀಮತಿ ರತ್ನ ಸುವರ್ಣ ಮಾತನಾಡಿ, ಸೇವಾ ಮನೋಭಾವ ಇದ್ದರೆ ಮಾತ್ರ ವಿಶೇಷ ಶಾಲೆಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ ಎಂದು ಹೇಳಿದರು. ನೂರ್ ಉಲ್ ಫುರ್ಖಾನ್ ಸಂಸ್ಥೆಯು ಉತ್ತಮ ಕೊಡುಗೆ ನೀಡುತ್ತಿದೆ. ಮಕ್ಕಳಿಗೆ ಸೂಕ್ತ ತರಬೇತಿ ನೀಡಿದರೆ ಅವರು ಇತರೆ ಮಕ್ಕಳಂತೆ ಬೆಳೆಯಲು ಸಾಧ್ಯವಿದೆ ಎಂದು ಹೇಳಿದರು.

ವಿಶೇಷ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್. ರವೀಂದ್ರ, ಯೂನಿಯನ್ ಬ್ಯಾಂಕ್ ಉಡುಪಿ ಉಪ ವ್ಯವಸ್ಥಾಪಕ ಶ್ರೀ ವಿಜಯ್ ಮಥಾಯಸ್, ನ್ಯಾಯವಾದಿ ಮೊಹಮ್ಮದ್ ಸುಹಾನ್, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ರಿಚರ್ಡ್ ಜೀವನ್ ಮೊರಾಸ್, ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ಕಾರ್ಯದರ್ಶಿ ಡಾ. ಜೆರಾಲ್ಡ್ ಪಿಂಟೋ, ಲಯನ್ಸ್ ಕ್ಲಬ್ ಪ್ರಕೃತಿ ಅಧ್ಯಕ್ಷ ಬಿ. ಗಿರೀಶ್ ಐತಾಳ್, ಟ್ರಸ್ಟ್ ನ ಉಪಾಧ್ಯಕ್ಷ ಇಕ್ಬಾಲ್ ಮನ್ನಾ ಹಾಗೂ ಸಲಹಾ ಸಮಿತಿ ಸದಸ್ಯ ಜುನೈದ್ ಅಸ್ಸಾದಿ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲೆಯ ಸಹ-ಸಂಸ್ಥಾಪಕರಾದ ಫಝುಲುರೆಹ್ಮಾನ್ ಅವರು ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಕೌಸರ್ ಟೀಚರ್ ನಿರೂಪಿಸಿದರು. ಸಲಹಾ ಸಮಿತಿ ಸದಸ್ಯರಾದ ಶೀರೀನ್ ಅಬ್ದುಲ್ ಲತೀಫ್ ವಂದಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions