ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) "ಮತ ಚೋರಿಗೆ" "ಹೊಸ ಅಸ್ತ್ರ" ಎಂದು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಮತಗಳ್ಳತನ"ವನ್ನು ನಿಲ್ಲಿಸುವ ಮೂಲಕ "ಒಬ್ಬ ವ್ಯಕ್ತಿ, ಒಂದು ಮತ" ತತ್ವವನ್ನು ರಕ್ಷಿಸುವುದಾಗಿ ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ, ಆದರೆ ಬಿಹಾರ SIRನಲ್ಲಿ ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ಅಳಿಸಿಹಾಕಿದ ಜನರ ಭೇಟಿಯ ಬಗ್ಗೆ ಮಾತನಾಡುತ್ತಾ ರಾಹುಲ್ ಗಾಂಧಿ ತಮ್ಮ ವಾಟ್ಸಾಪ್ ಚಾನೆಲ್ನ ಪೋಸ್ಟ್ನಲ್ಲಿ ಈ ಹೇಳಿಕೆ ನೀಡಿದ್ದಾರೆ.
ಭಾನುವಾರ ಬಿಹಾರದ ಸಸಾರಾಮ್ನಲ್ಲಿ ತಮ್ಮ ಮತ ಅಧಿಕಾರ ಯಾತ್ರೆಯ ಪ್ರಾರಂಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತದಾರರ ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಗಳ ಗುಂಪನ್ನು ಭೇಟಿಯಾಗಿದ್ದರು.
"SIR ಮತ ಕಳ್ಳತನಕ್ಕೆ ಹೊಸ ಅಸ್ತ್ರವಾಗಿದೆ. ಕಾಕತಾಳೀಯವಾಗಿ, ಈ ಚಿತ್ರದಲ್ಲಿ ನನ್ನೊಂದಿಗೆ ನಿಂತಿರುವ ಈ ಜನ ಈ ಕಳ್ಳತನಕ್ಕೆ 'ಜೀವಂತ' ಪುರಾವೆಯಾಗಿದ್ದಾರೆ" ಎಂದು ರಾಹುಲ್ ಗಾಂಧಿ ಫೋಟೋ ಹಂಚಿಕೊಂಡಿದ್ದಾರೆ.
"ಇವರೆಲ್ಲರೂ 2024ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದ್ದವರು. ಆದರೆ ಬಿಹಾರ ವಿಧಾನಸಭಾ ಚುನಾವಣೆ ಬರುವ ಹೊತ್ತಿಗೆ, ಅವರ ಗುರುತು, ಅವರ ಅಸ್ತಿತ್ವ ಭಾರತದ ಪ್ರಜಾಪ್ರಭುತ್ವದಿಂದ ಅಳಿಸಿಹೋಗಿತ್ತು" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ
"ಅವರು ಯಾರೆಂದು ನಿಮಗೆ ತಿಳಿದಿದೆಯೇ? ರಾಜ್ ಮೋಹನ್ ಸಿಂಗ್(70): ರೈತ ಮತ್ತು ನಿವೃತ್ತ ಸೈನಿಕ; ಉಮ್ರಾವತಿ ದೇವಿ(35): ದಲಿತ ಮತ್ತು ಕಾರ್ಮಿಕ; ಧನಂಜಯ್ ಕುಮಾರ್ ಬಿಂದ್(30): ಹಿಂದುಳಿದ ವರ್ಗ ಮತ್ತು ಕಾರ್ಮಿಕ; ಸೀತಾ ದೇವಿ(45): ಮಹಿಳೆ ಮತ್ತು ಮಾಜಿ MGNREGA ಕಾರ್ಮಿಕರು; ರಾಜು ದೇವಿ (55): ಹಿಂದುಳಿದ ವರ್ಗ ಮತ್ತು ಕಾರ್ಮಿಕ; ಮೊಹಮ್ಮುದ್ದೀನ್ ಅನ್ಸಾರಿ (52): ಅಲ್ಪಸಂಖ್ಯಾತ ಮತ್ತು ಕಾರ್ಮಿಕ," ಎಂದು ಅವರು ತಿಳಿಸಿದ್ದಾರೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಚುನಾವಣಾ ಆಯೋಗ(ಇಸಿ) ಅವರನ್ನು "ಬಹುಜನ್" ಮತ್ತು ಬಡವರಾಗಿರುವುದಕ್ಕಾಗಿ ಶಿಕ್ಷಿಸುತ್ತಿದೆ - "ನಮ್ಮ ಸೈನಿಕರನ್ನು ಸಹ ಬಿಡುತ್ತಿಲ್ಲ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಪರಿಸ್ಥಿತಿಗಳಿಂದಾಗಿ, ಅವರು ವ್ಯವಸ್ಥೆಯ ಪಿತೂರಿಯ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ. 'ಒಬ್ಬ ವ್ಯಕ್ತಿ, ಒಂದು ಮತ' ಎಂಬ ಮೂಲಭೂತ ಹಕ್ಕನ್ನು ರಕ್ಷಿಸಲು ನಾವು ಅವರೊಂದಿಗೆ ನಿಂತಿದ್ದೇವೆ" ಎಂದು ಕಾಂಗ್ರೆಸ್ ನಾಯಕ ಪ್ರತಿಪಾದಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions