ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನ ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಸಮ್ಮುಖ ಸಭೆ ನಡೆಸಿದರು.
ವೆನ್ಲಾಕ್ ಆಸ್ಪತ್ರೆಯ ವಿವಿಧ ಅಭಿವೃದ್ಧಿ ವಿಷಯದ ಹೊಸ ಪ್ರಸ್ತಾವಣೆ ಬಗ್ಗೆ ಚರ್ಚಿಸಿದ ಸಚಿವ ದಿನೇಶ್ ಗುಂಡೂರಾವ್ ಕಳೆದ ಮೂರು ವಷರ್ಗಳಿಂದ ವೆನ್ಲಾಕ್ ಜಿಎನ್ಎಮ್ ನರ್ಸಿಂಗ್ ವಿದ್ಯಾರ್ಥಿನಿಯರ ಬಾಕಿಯಿರುವ ಸ್ಟೈಪೆಂಡ್ ಹಣ ಬಿಡುಗಡೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದರು.
ಇತ್ತೀಚೆಗೆ ವರ್ಗಾವಣೆಗೊಂಡು ತೆರವಾದ ವಿವಿಧ ಶ್ರೇಣಿಯ ವೈದ್ಯರು ಮತ್ತು ಸ್ಟಾಪ್ ನರ್ಸ್ಗಳ ಖಾಲಿ ಹುದ್ದೆಯನ್ನು ಭರ್ತಿಗೊಳಿಸುವಂತೆಯೂ ಸಚಿವರು ಆಯುಕ್ತರಿಗೆ ನಿರ್ದೇಶಿಸಿದರು. ವೆನ್ಲಾಕ್ ಗೆ ಅತೀ ಹೆಚ್ಚು ವಿದ್ಯುತ್ ಬಿಲ್ ಬರುವುದರಿಂದ ಇಡೀ ಆಸ್ಪತ್ರೆಗೆ ಸೋಲಾರ್ ವ್ಯವಸ್ಥೆಯನ್ನು ಮಾಡಲು ಸದಸ್ಯರು ಬೇಡಿಕೆ ಮುಂದಿಟ್ಟರು. ತಕ್ಷಣ ಸಚಿವರು ಈ ಬಗ್ಗೆ ಪರಿಶೀಲಿಸಲು ಆಯುಕ್ತರಿಗೆ ಸೂಚಿಸಿದರು.
ವೆನ್ಲಾಕ್ ಆಸ್ಪತ್ರೆಗೆ ಪ್ರತೀ ದಿನ ರಾಜ್ಯದ 13 ಜಿಲ್ಲೆಗಳಿಂದ ರೋಗಿಗಳು ದಾಖಲಾಗಲು ಬರುತ್ತಿದ್ದಾರೆ. ವೆನ್ಲಾಕ್ ಆವರಣದಲ್ಲಿ ಹಗಲು ರಾತ್ರಿ ಜನ ಸಂಚಾರ ಇರುವುದರಿಂದ ಹಾಗೂ ಆಸ್ಪತ್ರೆಯಲ್ಲಿ ದಿನದ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳ ಸಹಿತ ಎಲ್ಲಾ ಸಿಬ್ಬಂದಿಗಳಿಗೆ ಮತ್ತು ರೋಗಿಗಳ ಜೊತೆ ಬರುವವರಿಗೆ ಭದ್ರತಾ ಹಿತದೃಷ್ಟಿಯಿಂದ ವೆನ್ಲಾಕ್ಗೆ ಪ್ರತ್ಯೇಕ ಪೊಲೀಸ್ ಔಟ್ ಪೋಸ್ಟನ್ನು ನಡೆಸಲು ಸದಸ್ಯರು ಸಚಿವರ ಗಮನ ಸೆಳೆದರು. ತಕ್ಷಣ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು.
ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೆಡಿಸಿನ್ ಬಿಲ್ಲು ಬಾಕಿ ಇರುವುದನ್ನು ತಕ್ಷಣ ಬಿಡುಗಡೆಗೊಳಿಸಲು ಆಯುಕ್ತರಿಗೆ ಸೂಚಿಸಿದರು. ಸಭೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಪದ್ಮನಾಭ ಅಮೀನ್, ಅಬ್ದುಲ್ ಕರೀಮ್ ಗೇರುಕಟ್ಟೆ, ಜೆ. ಶಶಿಧರ್ ಬಜಾಲ್, ಅನಿಲ್ ಎಂ. ರಸ್ಕಿನ್ಹಾ, ಜಯರಾಮ ದಿಡುಪೆ ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions