Advertisement

ಸಾಮಾಜಿಕ ಬದ್ಧತೆಯಿಂದ ನಮ್ಮ ಸರಕಾರದ ಕೆಲಸ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ನಮ್ಮ ಸರ್ಕಾರ ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾರ್ಕಳದ ಕುಕ್ಕುಂದೂರಿನಲ್ಲಿ ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಡೆದ ಕಿಸಾನ್ ಸಭಾ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಇದುವರೆಗೂ 26 ಕಂತಿನ ಹಣವನ್ನು 1.24 ಕೋಟಿ ಮಹಿಳೆಯರಿಗೆ ‌ತಲಾ 52 ಸಾವಿರ ರೂಪಾಯಿಯಂತೆ ಹಾಕಿದ್ದೇವೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸೀಟು ಗೆದ್ದಿಲ್ಲ, ಆದರೆ ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳು ಇದ್ದಾರೆ. ಇಡೀ ಕಾರ್ಕಳ ಕ್ಷೇತ್ರಾದ್ಯಂತ ಉದಯ್ ಕುಮಾರ್ ಅವರು ಮನೆ ಮನೆಗೆ ತಿರುಗಿ ಗೃಹಲಕ್ಷ್ಮಿ ಯೋಜನೆಯು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಿದ್ದಾರೆ ಎಂದು ಹೇಳಿದರು.

ದೇಶ ಕಂಡ ಉತ್ತಮ ರಾಜಕೀಯ ಪಟು ವೀರಪ್ಪ ಮೊಯ್ಲಿ ಅವರ ಜೀವನ ನಮಗೆಲ್ಲ ಮಾದರಿ. ಬಡ ಮಕ್ಕಳಿಗೆ ಅನುಕೂಲ ಆಗುವ ದೃಷ್ಟಿಯಿಂದ ಸಿಇಟಿ ಆರಂಭಿಸಿ ಇಡೀ ದೇಶಕ್ಕೆ ಮಾದರಿಯಾದಂತಹ ಆಡಳಿತವನ್ನು ನೀಡಿದರು. ಅವರು ಆರಂಭಿಸಿದ ಸಿಇಟಿಯೇ ಮುಂದೆ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ( RTE) ಆರಂಭಕ್ಕೆ ಮಾದರಿ ಆಯಿತು ಎಂದರು.‌

ವೀರಪ್ಪ ಮೊಯ್ಲಿ ಅವರು ಆರಂಭಿಸಿದ ಮಹಾತ್ಮ ಗಾಂಧಿ ವಸತಿ ಶಾಲೆ ನಿಸ್ವಾರ್ಥತತೆಯಿಂದ ಕೆಲಸ ಮಾಡುತ್ತಿದೆ‌. ಬಡ ಮಕ್ಕಳಿಗೆ ಉಚಿತ ವಾಗಿ ಶಿಕ್ಷಣ ನೀಡುತ್ತಿದೆ. ವೀರಪ್ಪ ಮೊಯ್ಲಿ ಅವರ ಜೀವನವೇ ನಮಗೆ ಮಾರ್ಗದರ್ಶನ, ಅವರು ನಮಗೆ ಆದರ್ಶ. ಐದು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸಮಾಜ ಸೇವೆ ಮಾಡುವುದು ಸುಲಭದ ಕೆಲಸವಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವೀರಪ್ಪ ಮೊಯ್ಲಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಸಮಾಜ ಸೇವೆ ಎನ್ನುವುದು ಒಂದು ದಿನದ ಕೆಲಸವಲ್ಲ, ಅದು ಜೀವನದ ಧ್ಯೇಯವಾಗಬೇಕು. ನಮ್ಮ ಸಮಯ, ನಮ್ಮ ಶಕ್ತಿ ಮತ್ತು ನಮ್ಮ ಪ್ರತಿಭೆಯನ್ನು ಸಮಾಜದ ಹಿತಕ್ಕಾಗಿ ಬಳಸಿದರೆ, ನಮ್ಮ ರಾಜ್ಯ ಹಾಗೂ ರಾಷ್ಟ್ರ ಇನ್ನಷ್ಟು ಪ್ರಗತಿ ಸಾಧಿಸುತ್ತದೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಉದಾಹರಣೆ ಎಂದು ನಾನು ಭಾವಿಸುತ್ತೇನೆ. ಕಿಸಾನ್ ಸಭಾ ಟ್ರಸ್ಟ್ ಇನ್ನೂ ಅನೇಕ ವರ್ಷಗಳು ಇದೇ ರೀತಿಯ ಸೇವಾ ಕಾರ್ಯಗಳನ್ನು ಮುಂದುವರಿಸಿ, ಸಮಾಜಕ್ಕೆ ಬೆಳಕು ನೀಡಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಚಿವರಾದ ಎಚ್.ಸಿ.ಮಹದೇವಪ್ಪ, ಮಧು ಬಂಗಾರಪ್ಪ, ಶಾಸಕರಾದ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜ, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ರಾಜೇಂದ್ರ ಕುಮಾರ್, ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ಮುಖಂಡರಾದ ಉದಯ್ ಶೆಟ್ಟಿ ಮುನಿಯಾಲು, ಮಾಜಿ ಶಾಸಕ ಗೋಪಾಲ್ ಪೂಜಾರಿ, ಮುಖಂಡರಾದ ಮಂಜುನಾಥ್ ಪೂಜಾರಿ, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು, ಕಿಸಾನ್ ಸಭಾದ ಅಧ್ಯಕ್ಷರಾದ ಹರ್ಷ ಮೊಯ್ಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions