Advertisement

ನನ್ನ ಹೋರಾಟ ಧರ್ಮಸ್ಥಳ ನ್ಯಾಯಕ್ಕಾಗಿ, ಹಣಕ್ಕಾಗಿ ಅಲ್ಲ : ನಟ ಪ್ರಕಾಶ್ ರಾಜ್

ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಬಹುಭಾಷಾ ನಟ, ಚಿಂತಕ ಪ್ರಕಾಶ್ ರಾಜ್ ಅವರು, ನನ್ನ ಹೋರಾಟವು ರಾಜಕೀಯ ಅಥವಾ ಧಾರ್ಮಿಕ ಉದ್ದೇಶದಿಂದ ಅಲ್ಲ, ನ್ಯಾಯಕ್ಕಾಗಿ ಮಾತ್ರ ಎಂದು ಹೇಳಿದ್ದಾರೆ.

ಬುಧವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ ಅವರು, ತಾವು ಯಾವ ಧರ್ಮದ ವಿರುದ್ಧವೂ ಅಲ್ಲ, ಬದಲಾಗಿ ಅನ್ಯಾಯದ ವಿರುದ್ಧ ಮಾತ್ರ ಧ್ವನಿ ಎತ್ತುತ್ತೇನೆ. ಸೌಜನ್ಯ ಕೊಲೆ ಪ್ರಕರಣ ಸೇರಿದಂತೆ ಧರ್ಮಸ್ಥಳದ ಸುತ್ತ ನಡೆದಿರುವ ಅಸಹಜ ಸಾವುಗಳ ಬಗ್ಗೆ ನ್ಯಾಯಾಂಗ ಹಾಗೂ ತನಿಖಾ ಸಂಸ್ಥೆಗಳು ಸಮಗ್ರವಾಗಿ ಪರಿಶೀಲಿಸಬೇಕು ಎಂಬುದು ನನ್ನ ಉದ್ದೇಶ ಎಂದರು.

200 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಅವರು, ತಾವು ಯಾವುದೇ ಹಣಕಾಸು ಲಾಭಕ್ಕಾಗಿ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದೂರವಾಣಿ ಸಂಭಾಷಣೆ ಹಾಗೂ ಆರೋಪಗಳ ಕುರಿತು ಮಾತನಾಡಿದ ಅವರು, ಗಿರೀಶ್ ಮಟ್ಟಣ್ಣನವರ್ ಮೂಲಕ ಸಂಪರ್ಕ ಬಂದಿದ್ದು, ಒಬ್ಬ ವ್ಯಕ್ತಿ ತಮಿಳಿನಲ್ಲಿ ಮಾತನಾಡಿ ಭೇಟಿ ಮಾಡಲು ಹೇಳಿದ್ದಾನೆ. ಆ ಸಂಭಾಷಣೆಯನ್ನು ದಾಖಲಿಸಿ ಸಂಬಂಧಿತ ಅಧಿಕಾರಿಗಳಿಗೆ ಹಂಚಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಕೆಲ ದಿನಗಳ ಬಳಿಕ ಆ ವ್ಯಕ್ತಿಯ ಹೇಳಿಕೆಗಳಲ್ಲಿ ಬದಲಾವಣೆ ಕಂಡುಬಂದಿದ್ದು, ಇನ್ನು ಮುಂದೆ ಆ ರೀತಿಯ ಕರೆಗಳನ್ನು ಸ್ವೀಕರಿಸಬೇಡಿ ಎಂದು ತನಿಖಾಧಿಕಾರಿಗಳು ಸಲಹೆ ನೀಡಿದರೆಂದು ಅವರು ತಿಳಿಸಿದ್ದಾರೆ. ತಪ್ಪು ಮಾಹಿತಿ ನೀಡಿರುವ ವ್ಯಕ್ತಿಯ ವಿರುದ್ಧವೂ ಕ್ರಮವಾಗಬೇಕು ಎಂಬುದು ತಮ್ಮ ನಿಲುವು ಎಂದು ನುಡಿದರು.

ಕೊನೆಯದಾಗಿ, ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದ ಪ್ರಕಾಶ್ ರಾಜ್, ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ವಿಶೇಷ ತನಿಖಾ ದಳ (SIT) ರಚನೆ ಮಾಡುವುದು ಅತ್ಯಗತ್ಯ. ಈ ಎಸ್‌ಐಟಿಗೆ ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಿ, ಸತ್ಯವನ್ನು ಆದಷ್ಟು ಬೇಗ ಜನತೆಯ ಮುಂದೆ ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions