ಉಡುಪಿ ನಗರಸಭೆಯಲ್ಲಿ ಆಸ್ತಿ ತೆರಿಗೆ ಪಾವತಿಯಲ್ಲಿ ಗಂಭೀರ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಹಣ ವಂಚಿಸಿದ ಆರೋಪದಲ್ಲಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ್ ಅವರು ಫೆ.12 ರಂದು ಉಡುಪಿ ನಗರ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ನಗರಸಭೆ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್ನ ನಗರಸಭೆ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇದೆ.
ಫೆ.3 ರಂದು ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಗಳ ತುಲನೆಯಲ್ಲಿ, ಜ.28ರಂದು ಪಾವತಿಯಾದಂತೆ ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಇದ್ದರೂ, ಬ್ಯಾಂಕ್ ದಾಖಲೆಗಳಲ್ಲಿ ಅದರ ನಮೂದು ಇಲ್ಲದಿರುವುದು ಪತ್ತೆಯಾಯಿತು. ಬಳಿಕ ಫೆ.4 ರಂದು ಮರು ಪರಿಶೀಲನೆ ನಡೆಸಿದಾಗ, ಫೆ.4ರ ದಿನಾಂಕದ ಸೀಲ್ ಹೊಂದಿದ್ದ ಚಲನ್ಗಳಲ್ಲಿ ಈಗಾಗಲೇ ಜ.28ರಂದು ಜನರೇಟ್ ಆಗಿದ್ದ ಒಂದೇ ಚಲನ್ ಸಂಖ್ಯೆಗಳು ಕಂಡುಬಂದವು.
ಒಂದೇ ಚಲನ್ ಸಂಖ್ಯೆಗೆ ಎರಡು ವಿಭಿನ್ನ ದಿನಾಂಕಗಳಲ್ಲಿ ಯೂನಿಯನ್ ಬ್ಯಾಂಕ್ ಸೀಲ್ ಇರುವ ಚಲನ್ಗಳು ಪತ್ತೆಯಾಗಿದ್ದು, ಬ್ಯಾಂಕ್ ಸೀಲ್ ನಕಲಿ ಮಾಡಿ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿರುವ ಶಂಕೆ ವ್ಯಕ್ತವಾಯಿತು. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ತನಿಖೆಯ ವೇಳೆ ಆರೋಪಿಗಳಾದ ಸುಪೇಶ್ (25) ಹಾಗೂ ಶಾಂತಾ (43) ಇವರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದೆ.
ಆರೋಪಿಗಳು ಪ್ರಕರಣದಲ್ಲಿ ಬಳಸಿದ ನಕಲಿ ಸೀಲ್ ಹಾಗೂ ಸಂಬಂಧಿತ ದಾಖಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣ ಪತ್ತೆ ಕಾರ್ಯವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಅವರ ನೇತೃತ್ವದಲ್ಲಿ ನಡೆಸಲಾಯಿತು. ಪಿಎಸ್ಐ ಗಂಗಪ್ಪ ಎಸ್., ಸುರೇಂದ್ರ ಡಿ., ಸಂತೋಷ್ ರಾಥೋಡ್, ನೇತ್ರಾವತಿ, ಪವಿತ್ರ, ಸ್ಪೂರ್ತಿ ಹಾಗೂ ಠಾಣಾ ಸಿಬ್ಬಂದಿ ಸಹಕರಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions