ಉಡುಪಿ ಸಮೀಪದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಅಷ್ಟಭಂದ ಬ್ರಹ್ಮಕಲಶೋತ್ಸವ ವೈಭವ–2026’ ಏಪ್ರಿಲ್ 16ರಿಂದ 20ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ. ಮಾಧವ ಪೂಜಾರಿ ತಿಳಿಸಿದ್ದಾರೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 20ರಂದು ಬೆಳಗ್ಗೆ 9.15ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರ ಪರಿ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಕಲಾನ್ಯಾಸ, ಮಹಾಪೂಜೆ ಹಾಗೂ ಪಲ್ಲಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ಮತ್ತು ಸಂಜೆ 6 ಗಂಟೆಗೆ ಉತ್ಸವ ಬಲಿ, ಮಹಾರಂಗ ಪೂಜೆ, ಭೂತ ಬಲಿ ನೆರವೇರಲಿದೆ ಎಂದರು.
ಇದಕ್ಕೂ ಮೊದಲು ಏಪ್ರಿಲ್ 15ರಂದು ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಸರ್ವಿಸ್ ನಿಲ್ದಾಣದ ಮೂಲಕ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದೆ. ಏಪ್ರಿಲ್ 16ರಿಂದ ಪ್ರತಿದಿನ ಸಂಜೆ 6.30ಕ್ಕೆ ಧಾರ್ಮಿಕ ಸಭೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಏಪ್ರಿಲ್ 16ರಂದು ಶಿವಪ್ರೇರಣ ಸಹಸ್ರಕಂಠ ಗಾಯನ ಹಾಗೂ ರಾಘು ಮಾಸ್ಟ್ರು ಅವರ ತುಳು ನಾಟಕ, ಏಪ್ರಿಲ್ 17ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಮತ್ತು ಶಿವದೂತ ಗುಳಿಗ ನಾಟಕ, ಏಪ್ರಿಲ್ 18ರಂದು ಶಿವಪ್ರೇರಣ ಚಿತ್ರಕಲಾ ಸ್ಪರ್ಧೆ, ಸ್ಯಾಕ್ಸೋಫೋನ್ ವಾದನ ಮತ್ತು ನೃತ್ಯ ವೈಭವ, ಏಪ್ರಿಲ್ 19ರಂದು ಮದರಂಗಿ, ರಂಗೋಲಿ ಸ್ಪರ್ಧೆ, ವೀಣಾ ನಾದೋತ್ಸವ ಹಾಗೂ ಜಾನಪದ ವೈಭವ ನಡೆಯಲಿವೆ ಎಂದು ಮಾಹಿತಿ ನೀಡಿದರು.

ದೇವಳದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿರುವ 36 ಸೆಂಟ್ಸ್ ಭೂಮಿಯನ್ನು ಸರ್ವರ ಸಹಕಾರದಿಂದ ಖರೀದಿಸಿ ದೇವರಿಗೆ ಭೂದಾನವಾಗಿ ಸಮರ್ಪಿಸುವ ಉದ್ದೇಶವಿದ್ದು, ಚದರ ಅಡಿಗೆ ₹2000ರಂತೆ ಅಥವಾ ₹101ರಿಂದ ₹5000ರೊಳಗಿನ ಕೂಪನ್ ಖರೀದಿ ಮೂಲಕ ಕಾಣಿಕೆ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಒಂದು ವರ್ಷದೊಳಗಾಗಿ ಈ ಮೊತ್ತವನ್ನು ದೇವಳಕ್ಕೆ ಹಿಂತಿರುಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ರಮೇಶ್ ಕಾಂಚನ್, ಪ್ರಧಾನ ತಂತ್ರಿ ಪಿ. ಶಶಿಕಾಂತ ತಂತ್ರಿ, ಪ್ರಧಾನ ಅರ್ಚಕ ಪಿ. ವಾಸುದೇವ ಉಪಾಧ್ಯ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions